Sunday, 1 May 2022

MADI MADI MADI ENIDU MADI ಮಡಿ ಮಡಿ ಮಡಿ ಏನಿದು ಮಡಿ? 🤔😀

 


Thoughts
ಮಡಿ ಮಡಿ ಮಡಿ... ಏನಿದು ಮಡಿ?  

ಪೀಠಿಕೆ: ಶ್ರೀವಿಷ್ಣುಪುರಾಣ ತೃತೀಯಾಂಶ: ಏಕಾದಶೋಧ್ಯಾಯ:
ಗೃಹಸ್ಥನಿಗೆ ಸಂಬಂಧಿಸಿದ ಸದಾಚಾರಗಳು.
***
ನದೀನದತಟಾಕೇಷು ದೇವಖಾತಜಲೇಷು ಚ|
ನಿತ್ಯಕ್ರಿಯಾರ್ಥಂ ಸ್ನಾಯೀತ ಗಿರಿಪ್ರಸ್ರವಣೇಷು ಚ||24||
ಕೂಪೇಷೂದ್ ಧೃತತೋಯೇನ ಸ್ನಾನಂ ಕುರ್ವೀತ ವಾ ಭುವಿ|
ಗೃಹೇಷೂದ್ ಧೃತತೋಯೇನ ಹ್ಯಥವಾ ಭುವ್ಯಸಂಭವೇ||25||
ಶುಚಿವಸ್ತ್ರಧರ: ಸ್ನಾತೋ ದೇವರ್ಷಿಪಿತೃತರ್ಪಣಮ್|
ತೇಷಾಮೇವ ಹಿ ತೀರ್ಥೇನ ಕುರ್ವೀತ ಸುಸಮಾಹಿತ:||26||
ತ್ರಿರಪ: ಪ್ರೀಣನಾರ್ಥಾಯ ದೇವಾನಾಮಪವರ್ಜಯೇತ್|
ಋಷೀಣಾಂ ಚ ಯಥಾನ್ಯಾಯಂ ಸಕೃಚ್ಚಾಪಿ ಪ್ರಜಾಪತೇ:|| 27 ||
ಪಿತೃಣಾಂ ಪ್ರೀಣನಾರ್ಥಾಯ ತ್ರಿರಪ: ಪೃಥಿವೀ ಪತೇ|
ಪಿತಾಮಹೇಭ್ಯಶ್ಚ ತಥಾ ಪ್ರೀಣಯೇತ್ ಪ್ರಪಿತಾಮಹಾನ್||28||
ಮಾತಾಮಹಾಯ ತತ್ಪಿತ್ರೇ ತತ್ಪಿತ್ರೇ ಚ ಸಮಾಹಿತ:|
ದದ್ಯಾತ್ ಪೈತ್ರೇಣ ತೀರ್ಥೇನ ಕಾಮ್ಯಂ ಚಾನ್ಯಚ್ಛೃಣುಷ್ವ ಮೇ||29||

ಅರ್ಥ :-
ಶಾಸ್ತ್ರೀಯವಾದ ನಿತ್ಯಕರ್ಮಗಳನ್ನು ಮಾಡುವಾಗ ಮೊದಲು ಸ್ನಾನ ಮಾಡತಕ್ಕದ್ದು.
ನದಿ, ಹಳ್ಳ, ಸರಸ್ಸುಗಳಲ್ಲಿಯೂ ಸ್ವತ:ಸಿದ್ಧವಾದ ಜಲಾಶಯಗಳಲ್ಲಿಯೂ ಗಿರಿ ಝರಿಗಳಲ್ಲಿಯೂ ಮೀಯುವುದು ವಿಹಿತವಾಗಿದೆ.
ಅಥವಾ ಬಾವಿಗಳಿಂದ ನೀರನ್ನೆತ್ತಿ ನೆಲದ ಮೇಲೆ ನಿಂತು ಸ್ನಾನ ಮಾಡಬೇಕು.
ಅದು ಆಗದಿದ್ದರೆ ಎತ್ತಿದ ನೀರನ್ನು ಮನೆಗೆ ತಂದು ಸ್ನಾನ ಮಾಡಬಹುದು.
ಸ್ನಾನವಾದ ಮೇಲೆ ಶುಚಿಯಾದ ವಸ್ತ್ರವನ್ನು ಧರಿಸಿ ದೇವ-ಋಷಿ-ಪಿತೃಗಳಿಗೆ ಕ್ರಮವಾಗಿ ದೈವಾದಿತೀರ್ಥಗಳಿಂದ ತರ್ಪಣವನ್ನೀಯತಕ್ಕದ್ದು.
ದೇವತೆಗಳ ಪ್ರೀತಿಗಾಗಿ ಮೂರು ಸಲವೂ, ಅದೇ ರೀತಿಯಲ್ಲಿ ಋಷಿಗಳಿಗೂ ಪ್ರಜಾಪತಿಗಾಗಿ ಒಂದು ಸಲವೂ ಜಲವನ್ನು ಬಿಡಬೇಕು.
ರಾಜ, ಪಿತೃ-ಪಿತಾಮಹ-ಪ್ರಪಿತಾಮಹರ ಪ್ರೀಣನಕ್ಕಾಗಿ ಮೂರು ಸಲ ತರ್ಪಣವನ್ನೀಯಬೇಕು.
ಹಾಗೆಯೇ ಮಾತಾಮಹ, ಮಾತು:ಪಿತಾಮಹ, ಮಾತು:ಪ್ರಪಿತಾಮಹರಿಗೂ ಸಹ ಸಮಾಹಿತವಾಗಿ ಪಿತೃತೀರ್ಥದಿಂದ ತರ್ಪಣವನ್ನೀಯಬೇಕು.
***
ಈಗ ವಿಷಯಕ್ಕೆ ಬರೋಣ -
ವಿಷ್ಣು ಪುರಾಣದಲ್ಲಿ ಹೇಳಿರುವ ಮೇಲಿನ ವಿಷಯ ಇಂದಿನ ಕಾಲಕ್ಕೆ ಎಷ್ಟು ಸಮಂಜಸವಾಗಿದೆ?
  • ಬೋರವೆಲ್ ನೀರು ಮಡಿಗೆ ಬರುವುದಿಲ್ಲ, ಏಕೆಂದರೆ ಕಬ್ಬಿಣದ ಪೈಪು ಇರುತ್ತದೆ. ಅದೇ ಕಾರಣಕ್ಕೆ ಮನೆಯ ನಲ್ಲಿಯ ನೀರೂ ಮಡಿಗೆ ಬರುವುದಿಲ್ಲ. ಬಾವಿ ತೋಡಿಸಿದರೆ ನೀರು ಸಿಗುವುದಿಲ್ಲ. ಸಿಕ್ಕರೂ 300 ರಿಂದ 500 ಅಡಿಯಿಂದ ನೀರನ್ನು ಮೇಲಕ್ಕೆ ಎತ್ತುವುದು ಕಷ್ಟ. ಹಾಗಾದರೆ ಪರಿಹಾರವೇನು?
  • ಎಲ್ಲಾ ಬ್ರಾಹ್ಮಣರು ನದಿ, ಕೊಳ, ಬಾವಿ ಹುಡುಕಿಕೊಂಡು ಹಳ್ಳಿಯಲ್ಲಿಯೇ ಇದ್ದರೆ, ಕೆಲಸಕ್ಕಾಗಿ ಪಟ್ಟಣಕ್ಕೆ ಸರಿಯಾದ ಸಮಯಕ್ಕೆ ಹೋಗುವುದು ಹೇಗೆ ಸಾಧ್ಯ?
  • ವಿಜ್ಞಾನದ ಉಪಯೋಗ ಪಡೆದರೆ, ಅಂದರೆ ಕಾರು, ಬಸ್ಸು, ಮೋಟಾರ್ ಸೈಕಲ್ ಬಳಸಿದರೆ ಮಡಿ ಹಾಳಾಗುತ್ತದೆ. ಮತ್ತೆ ಸ್ನಾನ ಮಾಡಬೇಕು, ಮತ್ತೆ ಬಾವಿ ಹುಡುಕಬೇಕು.
Ohh! getting confused?
ಎನು ಈ ಮಡಿ? ನಾವೇ ಮಾಡಿಕೊಂಡ ಒಂದು ಕ್ರಮ ಅಥವಾ ಪದ್ಧತಿ.
ಏಕೆ ಈ ಮಡಿ? ಮನಸ್ಸು ಶುದ್ಧದ ಜೊತೆಗೆ ದೇಹ ಶುದ್ಧವೂ ಬೇಕು.
ನಾವು ಕಾಲಕ್ಕೆ ತಕ್ಕಂತೆ ಬದಲಾಗುವುದು ಒಳ್ಳೆಯದಲ್ಲವೇ? ಕಾಲ ಬದಲಾದಂತೆ, ಶಾಸ್ತ್ರಗಳ ಆಚರಣೆಗಳೂ ಬದಲಾಗಬೇಕಾಗಿದೆ. ಈ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಅನಿವಾರ್ಯ.
  • ನಿತ್ಯ ಸ್ನಾನಕ್ಕೆ ಕಡ್ಲೆ ಹಿಟ್ಟು, ಸೀಗೆ ಪುಡಿ ಈಗ ಎಷ್ಟು ಜನ ಉಪಯೋಗಿಸುತ್ತಾರೆ?
  • ಇಂದಿನ ದಿನಗಳಲ್ಲಿ ಸಾಕಷ್ಟು ಪುರೋಹಿತರು ಮೊಬೈಲ್ ಫೋನ್ ಬಳಸಲು ಪ್ರಾರಂಭಿಸಿದ್ದಾರೆ. ದೇವಕಾರ್ಯ ಮಾಡುವಾಗ ಅಥವಾ ಮಾಡಿಸುವಾಗ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸದಿದ್ದರೆ, ಅವರಿಗೆ ಸಿಗಬೇಕಾದ ಕೆಲಸಕ್ಕೆ ತೊಂದರೆಯಾಗಬಹುದಲ್ಲವೇ?
  • ಇನ್ನೊಂದು ಮುಖ್ಯ ವಿಷಯವೆಂದರೆ, ಎಲ್ಲ ಯತಿಗಳು ಕಾರಿನಲ್ಲಿ ಓಡಾಡುತ್ತಾರೆ. ಇದು ಸರಿಯೇ? ಕಾರಿನಲ್ಲಿ ಓಡಾಡದೇ, ಮರದ ಪಾದುಕೆಗಳನ್ನು ಧರಿಸಿ ಅವರು ಎಷ್ಟು ಊರುಗಳನ್ನು ನಡೆದು ತಲುಪಲು ಸಾಧ್ಯ? ನಡೆಯಲು ಅವರು ಸಿದ್ಧರಿದ್ದಾರೆಯೇ? ಕಾರಿನಲ್ಲಿ ಓಡಾಡುವುದರಿಂದ ಅವರು ಬದಲಾಗಿಲ್ಲವೇ? ಈ ಪ್ರಶ್ನೆಗಳನ್ನು ಕೇಳುವವರನ್ನು ಎಲ್ಲರೂ ಟೀಕಿಸುತ್ತಾರೆ, ಉದ್ಧಟತನದ ಪ್ರಶ್ನೆಗಳು ಎಂದು ಹೇಳುತ್ತಾರೆ. ನಮ್ಮವರೇ (ಭಕ್ತರು) ಯತಿಶ್ರೇಷ್ಠರನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ ಎಂದು ಮೂದಲಿಸುತ್ತಾರೆ.
  • ಶಾಸ್ತ್ರಗಳ ಪ್ರಕಾರ ಪಿತೃಕಾರ್ಯಗಳನ್ನು ಮನೆಯಲ್ಲಿ ಮಾಡಬೇಕು. ಆದರೆ ಈಗ ಮಡಿ ಕಾರಣದಿಂದ ಈ ಕಾರ್ಯಗಳನ್ನು ಮನೆಯಲ್ಲಿ ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಮಠಗಳ ಆಶ್ರಯ ಪಡೆಯುತ್ತಿದ್ದಾರೆ. ಈ ಬದಲಾವಣೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.
  • ದೇವರ ನೈವೇದ್ಯಕ್ಕೆ ಗ್ಯಾಸ್ ಒಲೆಯಿಂದ ಮಾಡಿದ ಅಡುಗೆಯನ್ನು ಬಳಸುವುದಿಲ್ಲ. ಈ ವಿಷಯದಲ್ಲಿ ಇನ್ನೂ ಸುಧಾರಣೆಗಳ ಅಗತ್ಯವಿದೆ.
  • ಶಾಸ್ತ್ರಗಳ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುವುದು ಕಷ್ಟವಾದರೂ, ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ.
ಆದ್ದರಿಂದ.....
ಮನಸ್ಸನ್ನು ಗಟ್ಟಿಗೊಳಿಸಿ, ಅಸೂಯೆ ಮತ್ತು ಅಂತಸ್ತುಗಳಿಂದ ಮನಸ್ಸನ್ನು ಕಶ್ಮಲ ಮಾಡಿಕೊಳ್ಳಬೇಡಿ. ಪೂಜೆ ಮಾಡುವಾಗ ಮಡಿಯ ಬಗ್ಗೆ ಹೆಚ್ಚು ಯೋಚಿಸಿ ಭಕ್ತಿಯನ್ನು ಕಳೆದುಕೊಳ್ಳಬೇಡಿ ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳಿ.
ಎಲ್ಲಾ ಬ್ರಾಹ್ಮಣರ ಮನೆಗಳಲ್ಲಿ ಸ್ವಚ್ಛತೆಯನ್ನು ಯಾವಾಗಲೂ ಕಾಪಾಡಿಕೊಳ್ಳುವುದು ಶತಮಾನಗಳಿಂದ ಬಂದಿರುವ ವಾಡಿಕೆ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವುದು, ಹೊರಗಿನಿಂದ ಮನೆಗೆ ಬಂದಾಗ ಕೈಕಾಲು ತೊಳೆದು ಬಟ್ಟೆ ಬದಲಾಯಿಸುವುದು, ಊಟವಾದ ಮೇಲೆ ತಟ್ಟೆಯಲ್ಲಿ ಕೈ ತೊಳೆಯದೆ ಹೊರಗೆ ತೊಳೆಯುವುದು, ಸ್ನಾನದ ನಂತರವೇ ದೇವರ ಪೂಜೆ ಮಾಡುವುದು, ದೇವರನ್ನು ಮುಟ್ಟುವುದು, ಬೇಯಿಸಿದ ಎಲ್ಲಾ ಪದಾರ್ಥಗಳನ್ನು ದೂರದಲ್ಲಿ ಇಡುವುದು ಮುಂತಾದ ಆಚರಣೆಗಳು ಈಗಲೂ ರೂಢಿಯಲ್ಲಿವೆ.

ಇನ್ನು ನಮಗೆಲ್ಲರಲ್ಲಿ ಇರಬೇಕಾಗಿರುವುದು ಏನೆಂದರೆ
  1. ಮನಸ್ಸನ್ನು ಶುದ್ಧವಾಗಿ ಮತ್ತು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಇದು ಕಷ್ಟ, ಹೇಳುವುದು ಸುಲಭ, ಪಾಲಿಸುವುದು ಕಷ್ಟ. ಆದರೂ, ಸಾಧ್ಯವಾದಷ್ಟು ಪ್ರಯತ್ನಿಸಬಹುದು. ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
  2. ಇನ್ನೊಬ್ಬರ ಮೇಲೆ ಅಸೂಯೆ ಬೇಡ. ನಮ್ಮ ಸ್ಥಿತಿಗೆ (status) ತಕ್ಕಂತೆ ನಾವು ಜೀವನ ನಡೆಸಿದರೆ ಸಾಕು.
  3. ಮಡಿ ಕಾರಣಕ್ಕೆ ಮನೆಯಲ್ಲಿ ದೊಡ್ಡವರ ಹಾಗೂ ಚಿಕ್ಕವರ ನಡುವೆ ಅಥವಾ ಅಕ್ಕಪಕ್ಕದ ಮನೆಯವರ ನಡುವೆ ಅಥವಾ ಬಂಧುಗಳ ನಡುವೆ ಮನಸ್ತಾಪ ಬೇಡ.
  4. ಹಾಗೆಯೇ ಮಡಿ ಮಾಡದವರನ್ನು ಕೀಳಾಗಿ ಕಾಣಬೇಡಿ ಮತ್ತು ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಿ.
  5. ಕಟ್ಟಿಗೆಯಿಂದ ಅಡುಗೆ ಮಠದಲ್ಲಿ ನಡೆಯುವ ದೇವತಾ ಕಾರ್ಯಗಳಿಗೆ ಸೀಮಿತವಾಗಿರಲಿ. ಮನೆಯಲ್ಲಿ ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡುವುದರ ಬಗ್ಗೆ ಬೇಸರ ತೋರಿಸಬೇಡಿ.
  6. ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡುವಾಗ ಯತಿಶ್ರೇಷ್ಠರ ಕಾರು ಪ್ರಯಾಣವನ್ನು ನೆನಪಿಸಿಕೊಳ್ಳಿ. ಅಪರಾಧ ಪ್ರಜ್ಞೆ/ತಪ್ಪಿತಸ್ಥ ಮನೋಭಾವವನ್ನು ಮನಸ್ಸಿನಿಂದ ತೆಗೆದುಹಾಕಿ. ಗ್ಯಾಸ್ ಒಲೆಯನ್ನು ಚೆನ್ನಾಗಿ ಸ್ವಚ್ಛ ಮಾಡಿ ಅಡುಗೆ ಮಾಡಿದರೆ ತಪ್ಪೇನಿದೆ?
ಶಾಸ್ತ್ರಗಳ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುವುದು ಕಷ್ಟವಾದರೂ, ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ.

ವಿ.ಸೂ: ನಿಮ್ಮ ಸಲಹೆ ಅಥವಾ ಪ್ರತಿಕ್ರಿಯೆಯಲ್ಲಿ ಮೃದುತ್ವ ಇರಲಿ, ಯಾರೊಬ್ಬರ ಮನಸ್ಸಿಗೆ ಬೇಸರ ತರುವುದು ಬೇಡ.
***
end- written ಸಂಟೈಂ ಇನ್ March 2022

.


go back to... 
    click--> LINKS TO ARTICLES 

...

No comments:

Post a Comment