Monday, 30 December 2019

HOSARUCHI ಹೊಸರುಚಿ 🤔😀

 


Imaginative story-Time-->when lazy men are still going to office

ಕಾರಣಾಂತರದಿಂದ ನನ್ನವಳು ತವರೂರಿಗೆ ಹೋಗಬೇಕಾಗಿದ್ದಿದ್ದರಿಂದ ನಾನು ಎರಡು ದಿನ ಆಫೀಸಿಗೆ ರಜೆ ಹಾಕಬೇಕಾಗಿತ್ತು. ಕಾರಣ ಮಗ ಹಾಗೂ ಮಗಳನ್ನು ನೋಡಿಕೊಳ್ಳುವ ಭಾರ ನನ್ನ ಮೇಲೆ ಬಿದ್ದಿತ್ತು. ದೇವರ ದಯೆಯಿಂದ ಮಕ್ಕಳ ಶಾಲೆಗೆ ಜನಗಣತಿಯ ಪ್ರಯುಕ್ತ ಎರಡು ದಿನಗಳ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟಂತಹ ಹೋಮ್ ವರ್ಕ್, ಸಮವಸ್ತ್ರಗಳ ಇಸ್ತ್ರಿ, ಬೂಟುಗಳ ಪಾಲಿಶ್, ಶಾಲೆಗೆ ಕೊಂಡೊಯ್ಯಲು ಉಪಾಹಾರದ ವ್ಯವಸ್ಥೆ ಇತ್ಯಾದಿ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಬರಲಿಲ್ಲ.

ಅಡುಗೆ ಕೋಣೆಗೇ ಕಾಲಿಡದ ನಾನು ಈಗ ಎರಡು ದಿನ ಹೇಗಪ್ಪ ಊಟದ ವ್ಯವಸ್ಥೆ ಮಾಡುವುದು ಎಂದು ಯೋಚನಾಮಗ್ನನಾದೆನು. ಬೆಳಿಗ್ಗೆ ಕಾಮತ್ ಕೆಫೆಯಿಂದ ಇಡ್ಲಿ ವಡೆ ತರುವುದು ಎಂದು ನಿರ್ಧರಿಸಿದೆ. ಮಕ್ಕಳನ್ನು ಮನೆಯ ಒಳಗೆ ಬಿಟ್ಟು ಬಾಗಿಲು ಹಾಕಿಕೊಳ್ಳಲು ಹೇಳಿ ಮೋಟಾರ್ ಸೈಕಲ್ ನಲ್ಲಿ ಹೋಟೆಲಿಗೆ ಹೋದೆ. ಉಪಹಾರವನ್ನು ಪಾರ್ಸೆಲ್ ಮಾಡಲು ಹೇಳಿ ಕುರ್ಚಿಯಲ್ಲಿ ಕುಳಿತು ಅಲ್ಲಿಯೇ ಒಂದು ಲೋಟ ಕಾಫಿ ತರಲು ಹೇಳಿದೆ. ಕಾಫಿ ಕುಡಿದು ಮನೆಗೆ ಪಾರ್ಸೆಲ್ ತಂದದ್ದಾಯಿತು, ಮಕ್ಕಳು ತಿಂದದ್ದೂ ಆಯಿತು.

ಸದ್ಯ ಹೇಗೋ ಬೆಳಿಗ್ಗಿನ ಕತೆ ಕಳೆಯಿತು ಎಂದು ಯೋಚಿಸುತ್ತಿರುವಾಗಲೇ ಮಧ್ಯಾಹ್ನದ ಚಿಂತೆ ಪ್ರಾರಂಭವಾಯಿತು. ಮಧ್ಯಾಹ್ನ ಹರ್ಷಮಹಲ್ ಹೋಟೆಲಿಗೆ ಊಟಕ್ಕೆ ಎಲ್ಲಾರೂ ಹೋಗಿ ನಂತರ ಸಾಯಂಕಾಲ ಮನೆಯ ಹೊರಗೆ ಮೂಲೆಯಲ್ಲಿ ಮಾರುತ್ತಿದ್ದ ಆಲೂಗಡ್ಡೆ ಬೋಂಡ ತಂದು ಮತ್ತೆ ರಾತ್ರಿ ಕಾಮತ್ ಕೆಫೆಯಲ್ಲಿ ಉತ್ತರ ಭಾರತದ ಊಟ ನಾವೆಲ್ಲ ಮುಗಿಸಿದಾಗ ದೊಡ್ಡ ನಿಟ್ಟಿಸುರು ಬಿಟ್ಟೆನು.  

ಬೆಳಿಗ್ಗೆ ಆದದ್ದು ಗೊತ್ತಾಗಲೇ ಇಲ್ಲ. ಮತ್ತೆ ಪ್ರಾರಂಭ ಹೊಟ್ಟೆ ತುಂಬಿಸುವ ಯೋಚನೆ. ಇಂದು ಶಾನ್ ಭಾಗ್ ಹೋಟೆಲ್ಲಿನಿಂದ ಉಪಾಹಾರ ತಂದು ಮಧ್ಯಾಹ್ನ ಹರ್ಷಮಹಲ್ ಹೋಟೆಲ್ ನಲ್ಲಿ ಊಟ ಕೂಡ ಮಾಡಿದೆವು.  

ಆಗಲೇ ಐದು ಸಲ ಉಪಹಾರ/ಭೋಜನ ಗೃಹದ ತಿನಿಸು ನಮಗೆಲ್ಲ ಬೇಸರ ತಂದಿತ್ತು. ಹಾಗಾಗಿ ನನ್ನ ಮಗಳು ರಾತ್ರಿಗೆ ನಾನೇ ಏನಾದರೂ ಹೊಸರುಚಿ ಮನೆಯಲ್ಲೇ ಮಾಡಬೆಂಕೆಂದು ಒತ್ತಾಯಿಸಿದಾಗ ನನ್ನ ಮನಸ್ಸು ಕೂಡ ಏಕೆ ಪ್ರಯತ್ನಿಸಬಾರದು ಎಂದು ಹೇಳಿತು. 

ಆದರೆ ಏನು ತಯಾರಿಸಬೇಕೆಂಬುದೇ ಪ್ರಶ್ನೆ. ಮಗಳು ಕೂಡಲೇ ಸುಮಿತ್ ಮಿಕ್ಸರ್ ಕುಕ್ಕರ್ ಜೊತೆಗೆ ಕೊಟ್ಟಿದ್ದ ಪಾಕ ಪುಸ್ತಕ ಹುಡುಕಿ ತೆಗೆದುಕೊಟ್ಟಳು. ನನ್ನ ದುರದ್ರುಷ್ಟಕ್ಕೆ ಈ ಪುಸ್ತಕ ಇಂಗ್ಲೀಷನಲ್ಲಿ ಬರೆದಿದ್ದರಿಂದ ತರಕಾರಿ, ಮಸಾಲೆ, ಬೇಳೆ ಇತರೆ ಪದಾರ್ಥಗಳ ಒಂದೂ ಹೆಸರು ನಮಗೆ ಇಂಗ್ಲಿಷಿನಲ್ಲಿ ಗೊತ್ತಿಲ್ಲದೇ ಇರುವುದು ಮನದಟ್ಟಾಯಿತು. ಇಂಗ್ಲಿಷ್-ಕನ್ನಡ ನಿಘಂಟು ಮನೆಯಲ್ಲಿರದ ಕಾರಣ, ಮೊದಲು ಅದನ್ನು ಖರೀದಿಸಲು ಪುಸ್ತಕದ ಅಂಗಡಿಗೆ ಹೋಗಬೇಕು, ಬೇಕಾಗಿರುವ ಪದಾರ್ಥಗಳ ಪಟ್ಟಿ ತಯಾರಿಸಬೇಕು ನಂತರ ಮತ್ತೆ ಬಜಾರಿಗೆ ಹೋಗಿ ಪದಾರ್ಥಗಳನ್ನು ತರಬೇಕು. ಸಮಯದ ಅಭಾವ ಇದೆ. ಆದ್ದರಿಂದ ಬೇರೆ ಕನ್ನಡದಲ್ಲಿ ಕೊಟ್ಟಿರುವ ಪುಸ್ತಕಗಳನ್ನು ಹುಡುಕಲು ನಾನು ಮತ್ತು ನನ್ನ ಮಗಳು ಪ್ರಾರಂಭಿಸಿದೆವು. ಮನೆಯಲ್ಲಿದ್ದ ಭಾನುವಾರದ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳನ್ನೆಲ್ಲ ಜಾಲಾಡಿದರೂ ವ್ಯರ್ಥ ಶ್ರಮವಾಯಿತು.    

ಹಾಗೆಯೇ ಯೋಚಿಸುತ್ತ ಕುಳಿತಿರುವಾಗ ಮಗಳು ಲಾಟರಿ ಸಿಕ್ಕಿದವಳಂತೆ ಕೂಗಿ ನನ್ನವಳು ಹೋಗುತ್ತಿದ್ದ ವನಿತಾ ಸಮಾಜದ ತ್ರೈಮಾಸಿಕ ಪತ್ರಿಕೆಗಳನ್ನು ಹೊರತೆಗೆದಳು. ನನಗಂತೂ ಹೊಸರುಚಿ ತಯಾರಿಸಿದಷ್ಟೇ ಸಂತೋಷ ಆ ಪತ್ರಿಕೆಗಳನ್ನು ನೋಡಿದಾಗ ಆಯಿತು. ಏಕೆಂದರೆ ಪ್ರತಿಯೊಂದು ಪತ್ರಿಕೆಯಲ್ಲೂ ಹೊಸರುಚಿ ಬಗ್ಗೆ ಬರೆದಿದ್ದರು.  

ಈಗ ಯಾವ ಪದಾರ್ಥ ತಯಾರಿಸಬೇಕೆಂದು ನಾನು ಮತ್ತು ನನ್ನ ಮಗಳು ತಲೆಕೆಡಿಸಿಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಗ ಇನ್ನೂ ಚಿಕ್ಕವನಿದ್ದಿದ್ದರಿಂದ ನಮ್ಮ ಪರದಾಟದ ಬಗೆಗೆ ಕಿಂಚಿತ್ತೂ ಚಿಂತಿಸದೆ ತನ್ನ ಪಾಡಿಗೆ ತಾನು ಧಾಂಧಲೆ ನಡೆಸುತ್ತಿದ್ದು ಮಧ್ಯೆ ಮಧ್ಯೆ ಬಂದು ತನಾಗಿಷ್ಟವಾದ ಕ್ಯಾರೆಟ್ ಹಲ್ವ ಮಾಡು ಎಂದು ನನ್ನ ಪೀಡಿಸುತ್ತಿದ್ದನು.  

ಪತ್ರಿಕೆಗಳಲ್ಲಿ ನಮಗೆ ಕಂಡಿದ್ದು ಅವಿಲ್ ಕರಿ, ಅಚ್ಚಪ್ಪಂ, ಪತ್ರೊಡೆ, ಅತ್ರಾಸ, ಬನಾನ ಡಿಲೈಟ್ ಮುಂತಾದುವುಗಳು. ನಾನೋ ಉಪ್ಪಿಟ್ಟು ಅಥವಾ ಸಜ್ಜಿಗೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಹುಡುಕಲು ತಡಕಾಡಿದೆ. ನನ್ನಂಥವರಿಗೋಸ್ಕರವಾದರೂ ಉಪ್ಪಿಟ್ಟು, ಸಜ್ಜಿಗೆ, ಒಗ್ಗರಣೆ ಅನ್ನ, ಟೊಮೆಟೊ ಸಾರು ಇಂಥಹವುಗಳನ್ನು ತಯಾರಿಸುವುದು ತಿಳಿಸಿರಿ ಎಂದು ನಾಳೆ ಇವಳು ಬಂದಮೇಲೆ ಸಲಹೆ ಕೊಡಬೇಕೆಂದು ನಿರ್ಧರಿಸಿದೆನು.  

ಮಗಳನ್ನು ಕೇಳಿದೆ- 
"ಯಾವುದನ್ನು ಮಾಡೋಣ ಹೇಳು"

ಮಗಳು ಸೂಚಿಸಿದಳು -
"ಕ್ಯಾರೆಟ್ ಹಲ್ವದ ಬಗ್ಗೆ ಕೊಟ್ಟಿದ್ದಾರೆ.  ಅದನ್ನೇ ಮಾಡು ......ಬೇಡಾ, ಹಲ್ವ ಬೇಡಾ" ಎಂದು ತನ್ನನ್ನೇ ತಿದ್ದಿಕೊಂಡಳು.

"ಏಕೆ, ಅದನ್ನೇ ಮಾಡೋಣ, ಹೇಗೂ ನಿನ್ನ ತಮ್ಮನಿಗೂ ಅದು ಇಷ್ಟ"

"ಬೇಡವೇ ಬೇಡ, ಏಕೆಂದರೆ ಅದನ್ನು ತಯಾರಿಸಲು ನಿಪುಣತೆ ಬೇಕು.  ಸ್ವಲ್ಪ ತಪ್ಪಿದರೂ ಕೆಟ್ಟು ಹೋಗುತ್ತದೆ.  ನಿನಗೋ ಅನ್ನ ಕೂಡ ಮಾಡಲು ಬರುವುದಿಲ್ಲ, ಇನ್ನು ಕ್ಯಾರೆಟ್ ಹಲ್ವ ನೀನು ಮಾಡಿದ ಹಾಗೇ". ಮಗಳು ಹೇಳುವುದೂ ಸರಿಯೇ.  "ಹಲ್ವ ಕ್ಯಾನ್ಸಲ್" ಎಂದೆ.

"ವೆಳ್ಳಿಯಪ್ಪಮ್" ತಯಾರು ಮಾಡೋಣ ಎಂದು ಏನೇನು ಸಾಮಗ್ರಿಗಳು ಬೇಕೆಂದು ಓದಿದೆ. ಅಕ್ಕಿ-ಇದೆ, ತೆಂಗಿನಕಾಯಿ-ಇದೆ, ಸಕ್ಕರೆ-ಇದೆ, ಉಪ್ಪು-ಇದೆ, ತೆಂಗಿನಕಾಯಿಯ ನೀರು ಹಿಂದಿನ ದಿನ ತೆಗೆದಿರಿಸಿದ್ದು. "ಇದನ್ನು ಎಲ್ಲಿಂದ ತರುವುದು ಪುಟ್ಟಿ" ಎಂದು ಮಗಳಿಗೆ ಪ್ರಶ್ನೆ ಹಾಕಿದೆ. ಅದಕ್ಕವಳು "ಕ್ಯಾನ್ಸಲ್" ಎಂದಳು.

ಈಗ ಮುಂದಿನದು "ಅವಿಲ್ ಕರಿ".  ಬಾಳೆಕಾಯಿ, ಕುಂಬಳಕಾಯಿ, ಸುವರ್ಣಗೆಡ್ಡೆ, ಪರವಾಗಿಲ್ಲ ಎಲ್ಲ ಮಾರುಕಟ್ಟೆಯಲ್ಲಿ ಲಭ್ಯ. ನುಗ್ಗೆಕಾಯಿ 3 ಬೇಕು. ಈಗೆಲ್ಲಿಯ ನುಗ್ಗೆಕಾಯಿಯ ಕಾಲ. ಆದಂತೂ ಈ ಊರಿನಲ್ಲಿ ಸಿಗುವುದಿಲ್ಲ. ಮಗಳು ಹೇಳಿದಳು "ಕ್ಯಾನ್ಸಲ್, ಮುಂದಿನದು". 

"ನನ್ನ ಅದೃಷ್ಟ ಸರಿಯಿಲ್ಲ, ನೀನೇ ಓದು" ಎಂದು ಮಗಳಿಗೆ ಹೇಳಿದೆ. 

"ಉಣ್ಣಿಯಪ್ಪನ್" ಮಗಳು ಓದಲು ಪ್ರಾರಂಭಿಸಿದಳು. ಅಕ್ಕಿ, ಬೆಲ್ಲ, ತೆಂಗಿನಕಾಯಿ, ಜೀರಿಗೆ, ಎಳ್ಳು, ಏಲಕ್ಕಿ, ಉಪ್ಪು ಎಲ್ಲಾ ಇವೆ.  ತೆಂಗಿನ ಎಣ್ಣೆ ಅರ್ಧ ಲೀಟರ್ ಎಂದು ಓದುತ್ತಿದ್ದಂತೆ ಮುಖವನ್ನು ಎಣ್ಣೆ ಕುಡಿದ ಮುಖದಂತೆ ನನ್ನ ಮಗಳು ಮಾಡಿಕೊಂಡಳು. 

"ಯೋಚಿಸಬೇಡ, ನಾವು ಕಡ್ಲೆಕಾಯಿ ಎಣ್ಣೆಯಲ್ಲಿ ತಯಾರು ಮಾಡೋಣ" ಮಗಳಿಗೆ ಸಮಾಧಾನ ಹೇಳಿದೆ. ಸಂತೋಷದಿಂದ ಮಾಡುವ ವಿಧಾನವನ್ನು ಓದಲು ಮತ್ತೆ ಪ್ರಾರಂಭಿಸಿದಳು.

"ಅಕ್ಕಿಯನ್ನು ತೊಳೆದು 3 ಗಂಟೆಗಳ ಕಾಲ ನೆನಸಬೇಕು". "ನಿಲ್ಲಿಸು" ಎಂದೆ.  "ಈಗಾಗಲೇ ರಾತ್ರಿ ಏಳೂವರೆ ಗಂಟೆ ಆಗಿದೆ. ಮೂರು ಗಂಟೆ ನೆನಸುವುದು ಎಂದೆರೆ ರಾತ್ರಿ ಹತ್ತೂವರೆ ಆಗುತ್ತೆ. ತಯಾರಿಸಲು ಒಂದು ಗಂಟೆಯಾದರೂ ಬೇಕು. ಊಟ ಮುಗಿಸುವಾಗ ರಾತ್ರಿ ಹನ್ನೆರಡು ಹೊಡಿಯುತ್ತೆ" ಎಂದಾಗ ನನ್ನ ಮಗ "ಕ್ಯಾನ್ಸಲ್" ಎಂದು ಕಿರುಚಿದನು.

"ಬನಾನ ಡಿಲೈಟ್" ಓದಲು ಮತ್ತೇ ಪ್ರಾರಂಭಿಸಿದಳು. "ಬೇಕಾಗುವ ಪದಾರ್ಥಗಳು, ನೇಂದ್ರ ಬಾಳೆ 4. 

"ನೇಂದ್ರ ಬಾಳೆ ಇಲ್ಲಿ ಸಿಗುವುದಿಲ್ಲ ... ಮುಂದಿನದು"

"ದಾಸವಾಳ ಸೊಪ್ಪಿನ ಇಡ್ಲಿ, ಬೇಕಾಗುವ ಸಾಮಗ್ರಿಗಳು - ಅಕ್ಕಿ, ಬಿಳೀ ದಾಸವಾಳ ಸೊಪ್ಪು ಎರಡು ಮುಷ್ಟಿ". ನಾನು ಯೋಚನೆಯಲ್ಲಿ ಮುಳುಗಿದೆ. ಈ ರಾತ್ರಿಯಲ್ಲಿ ದಾಸವಾಳದ ಸೊಪ್ಪು, ಅದೂ ಬಿಳೀದನ್ನು ಯಾರ ಮನೆಯಿಂದ ಕದ್ದು ತರಬಹುದು?  ನನ್ನ ಮುಖ ನೋಡಿ ಮಗಳು ತಾನಾಗಿಯೇ "ಕ್ಯಾನ್ಸಲ್" ಎಂದಳು. 

ನಂತರ ಮಗಳು "ಮುಂದಿನ ತಿನಸು" ಎಂದಾಗ, "ಫುಲ್ಸ್ಟಾಪ್" ಎಂದೆ.
  "ಯಾಕೆ ಪಪ್ಪಾ?"

"ಈಗಾಗಲೇ ರಾತ್ರಿ ಏಳೂವರೆ ಗಂಟೆಯಾಗಿದೆ. ಇನ್ನು ತಿನಿಸುಗಳ ಬಗ್ಗೆ ಓದಿ ನಿರ್ಧಾರ ತೆಗೆದುಕೊಳ್ಳಲು ಇಪ್ಪತ್ತು ನಿಮಿಷಗಳಾದರೂ ಬೇಕು. ನಂತರ ಅಡುಗೆ ಕೋಣೆಯಲ್ಲಿರುವ 50 ಡಬ್ಬಿಗಳನ್ನು ತೆಗೆದು ಬೇಕಾದ ಸಾಮಗ್ರಿಗಳನ್ನು ಜೋಡಿಸಿಡಲು ಕನಿಷ್ಠ ಅರ್ಧ ಗಂಟೆಯಾದರೂ ಬೇಕು. ಮನೆಯಲ್ಲಿರದ ಪದಾರ್ಥಗಳನ್ನು ತರಲು ಮಾರುಕಟ್ಟೆಗೆ ಹೋಗಿ ಬರಲು ಅರ್ಧ ಗಂಟೆಯಾದರೂ ಬೇಕು. ನಂತರ ತಯಾರಿಸಲು ಒಂದು ಗಂಟೆಯಾದರೂ ಬೇಕು-ನೆನೆಸುವುದು ಇಲ್ಲದಿದ್ದರೆ. ಇದೆಲ್ಲ ಮುಗಿಸುವಷ್ಟರಲ್ಲಿ ನೀವಿಬ್ಬರೂ ನಿದ್ದೆ ಹೋಗಿರುತ್ತೀರಾ. ಆದ್ದರಿಂದ ರೆಡೀ, ಸ್ಟೆಡೀ, ಗೋ ಕಾಮತ್ ಕೆಫೆ".
***
end- elloo ನಡೆದದ್ದು ಅಲ್ಲ imagination written sometime ಇನ್ 2002

.


go back to... 
    click--> LINKS TO ARTICLES 

...

No comments:

Post a Comment